Jan 14, 2016

ಆದಿಚುಂಚನಗಿರಿ

ಕಾಲಭೈರವನ ಪುಣ್ಯಧಾಮ –ಆದಿಚುಂಚನಗಿರಿ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಹಾಗೂ ತುರುವೇಕೆರೆ ತಾಲೂಕು ಮಾಯಸಂದ್ರಕ್ಕೆ ಅತಿ ಸಮೀಪದಲ್ಲಿರುವ  ಪುಣ್ಯಕ್ಷೇತ್ರ ಆದಿ ಚುಂಚನಗಿರಿ. ಮಂಡ್ಯದಿಂದ 66 ಕಿಲೋ ಮೀಟರ್ ದೂರದಲ್ಲಿದೆ.  ಗಿರಿ ಹೆಸರೇ ಹೇಳುವಂತೆ ಇದೊಂದು ಗಿರಿ ಪ್ರದೇಶ. ಸ್ಥಳ ಪುರಾಣಗಳ ರೀತ್ಯ ತ್ರೇತಾಯುಗದಲ್ಲಿ ಇಲ್ಲಿ ಚುಂಚನೆಂಬ ರಾಕ್ಷಸ ನೆಲೆಸಿದ್ದನಂತೆ. ಪರಶಿವ ಈ ರಕ್ಕಸನನ್ನು ಕೊಂದು ಇಲ್ಲಿಯೇ ಕಾಲಭೈರವನಾಗಿ ನೆಲೆಸಿದನಂತೆ

, ಅಂದಿನಿಂದ ಕ್ಷೇತ್ರಕ್ಕೆ ಚುಂಚನಗಿರಿ ಎಂಬ ಹೆಸರು ಬಂದಿದೆ.

ಸ್ಥಳೀಯರು ಹೇಳುವ ಕತೆಯ ರೀತ್ಯ ಇಲ್ಲಿ ಬಹಳ ಹಿಂದೆ ದಟ್ಟವಾದ ಬಿದಿರುಮಳೆ ಇತ್ತು. ಬೆಳ್ಳೂರಿನ ಪಾಳೆಯಗಾರ ತನ್ನ ಮಗುವಿಗೆ ತೊಟ್ಟಿಲು ಮಾಡಿಸಲು, ಗಿಣ್ಣಿಲ್ಲದ ಬಿದಿರು ತರಲು ಈ ಗಿರಿಗೆ ಮೇದರನ್ನು ಕಳುಹಿಸಿದನಂತೆ.  ಮಧ್ಯದ ಬೆಟ್ಟದಲ್ಲಿ ಬಂದು ಗಿಣ್ಣಿಲ್ಲದ ಬಿದಿರು ಹುಡಿಕಿದ ಮೇದರು ಅದನ್ನು ಕಡಿಯಲು ಹೋದಾಗ, ಅವರ ಮಚ್ಚು ಶಿವಲಿಂಗಕ್ಕೆ ತಾಗಿ ಅವರು ಅಲ್ಲಿ ರಕ್ತ ಕಾರಿ ಸತ್ತರಂತೆ. ಇಂದಿಗೂ ಇಲ್ಲಿ  ಮೇದರ ತಲೆಗಳೆನ್ನಲಾದ ಮೂರು ಕಲ್ಲಿನ ಮುಂಡಗಳು ಇವೆ. ಮೇದರ ಮಚ್ಚಿನಿಂದ ಕಚ್ಚಾದ ಶಿವಲಿಂಗವೂ ಇದೆ.

ಸ್ಥಳಪುರಾಣದ ರೀತ್ಯ ಈ ಕ್ಷೇತ್ರದಲ್ಲಿ  ಈಶ್ವರನ ಕಪಾಲದಿಂದ ಅವತರಿಸಿದ ಸಿದ್ಧಯೋಗಿಯೊಬ್ಬರು ದೀರ್ಘಕಾಲ ಶಿವಪಾರ್ವತಿಯರನ್ನು ಕುರಿತು ತಪಸ್ಸು ಮಾಡಿದರಂತೆ.  ಶಿವ ಪ್ರತ್ಯಕ್ಷನಾಗಿ ತನ್ನ ಅಂಶಯುಕ್ತವಾದ ಪೀಠವೊಂದನ್ನು ಇಲ್ಲಿ ಸ್ಥಾಪಿಸಿ ತನ್ನ ಪ್ರತಿನಿಧಿಯಾಗಿ ಆ ಸಿದ್ಧಯೋಗಿಯನ್ನು ಅಲ್ಲಿಯೇ ಇರಲು ಹೇಳಿದನಂತೆ.   ಪಂಚಪ್ರಾಣಗಳಿಂದ ಆದಿಗಂಗಾಧರೇಶ್ವರ

, ಈಶ್ವರ, ಕತ್ತಲೆ ಸೋಮೇಶ್ವರ, ಮಲ್ಲೇಶ್ವರ, ಗವಿಸಿದ್ದೇಶ್ವರ ರೂಪದಲ್ಲಿ ಇಲ್ಲಿ ತಾನು ಉದ್ಭವಿಸಿ ಈ ಕ್ಷೇತ್ರವನ್ನು ಪಂಚಲಿಂಗ ಕ್ಷೇತ್ರವಾಗಿ ಮಾಡುವುದಾಗಿಯೂ, ಬೇಡಿ ಬರುವ ಭಕ್ತರ ಅಭಿಷ್ಠ ಈಡೇರಿಸುವುದಾಗಿ ಹೇಳಿದನಂತೆ.

ಕ್ಷೇತ್ರರಕ್ಷಣೆಗಾಗಿ ಆದಿಶಕ್ತಿರೂಪಳಾದ ಸ್ತಂಭದೇವತೆಯನ್ನೂ ಪರಶಿವನೇ ಪ್ರತಿಷ್ಠಾಪಿಸಿದನೆಂದು ಸ್ಥಳಪುರಾಣ ಸಾರುತ್ತದೆ. ಹೀಗಾಗೇ ಇಲ್ಲಿಯ ಪ್ರಧಾನ ದೇವರು ಕಂಬದಮ್ಮ ರೂಪದಲ್ಲಿರುವ ಮಾತೃದೇವತೆ. ಇಲ್ಲಿ ವಿಸ್ತಾರವಾದ ಓಲಗದ ಅರೆಯ ಮೇಲೆ ನಿಂತಿರುವ ಕಂಬದಮ್ಮ, ಭಕ್ತರು ಬೇಡಿದ ವರ ನೀಡುತ್ತಾಳೆ ಎಂಬುದು ನಂಬಿಕೆ. 

ಚುಂಚನಗಿರಿಯಲ್ಲಿ  ಚೋಳರು ಕಟ್ಟಿಸಿದ ಪುರಾತನವಾದ ಗಂಗಾಧರೇಶ್ವರನ ದೇವಾಲಯವಿದೆ. ಬೆಟ್ಟದ ತುದಿಯಲ್ಲಿ ಚೋಳೂರ ಕಂಬವಿದೆ.  ಜಾತ್ರೆಯ ಸಂದರ್ಭದಲ್ಲಿ ಈ ಕಂಬದ ಮೇಲೆ ಹಚ್ಚುವ  ದೀಪ ಸುತ್ತಮುತ್ತಲ 50 ಕಿಲೋ ಮೀಟರ್ ದೂರ ಕಾಣಿಸುತ್ತದಂತೆ. ದೀಪದ ಬೆಳಕು ಚೋಳೂರಿನ ಕೊಳದಲ್ಲಿ ಕಾಣುತ್ತದೆ ಎಂದೂ ಜನ  ಹೇಳುತ್ತಾರೆ.  ಇಲ್ಲಿರುವ ಇನ್ನೊಂದು ಶಿಖರಕ್ಕೆ ಹೋಗುವ ಹಾದಿ ದುರ್ಗಮವಾಗಿದ್ದು, ಸ್ತ್ರೀಯರು ವೃದ್ಧರು ಇಲ್ಲಿಗೆ ಹೋಗಲು ಅಂಜುತ್ತಾರೆ. ಆದರೆ, ಭಯಾನಕ ಕಂದಕಗಳಿಂದ ಕೂಡಿದ ಕೋಡುಗಲ್ಲಿಗೆ ಸರಪಣಿಯನ್ನು ಹಿಡಿದು ಹತ್ತುವುದು ನಿಜಕ್ಕೂ ಸಾಹಸವೇ ಸರಿ.  ಮಕ್ಕಳಾಗದ ಹೆಂಗಸರು ಹರಕೆ ಹೊತ್ತು ಮುಂದೆ ಮಕ್ಕಳಾದರೆ ಬೆನ್ನಿಗೆ ಶಿಶುವನ್ನು ಕಟ್ಟಿಕೊಂಡು ಈ ಶಿಖರವನ್ನು ಹತ್ತುತ್ತಾರಂತೆ. ಗಿರಿಯ ಮಧ್ಯಶಿಖರದಲ್ಲಿ ಕತ್ತಲುಸೋಮೇಶ್ವರ ಲಿಂಗವಿದೆ. ದಟ್ಟವಾದ ಕತ್ತಲು ಕವಿದಿರುವ ಗುಹೆಯಲ್ಲಿರುವ ಲಿಂಗಕ್ಕೆ  ಕತ್ತಲು ಸೋಮೇಶ್ವರ ಎಂದು ಹೆಸರು ಬಂದಿದೆ.

ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಶ್ರೀಮಠ ಹಾಗೂ ಆದಿಚುಂಚನಗಿರಿ ಕ್ಷೇತ್ರ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ. 20 ವರ್ಷಗಳ ಹಿಂದೆ ಇಲ್ಲಿ ನೂತನ ದೇವಾಲಯ ನಿರ್ಮಿಸುವ ಕೆಲಸ ಪ್ರಾರಂಭವಾಗಿ ಈಗ ಪೂರ್ಣಗೊಂಡಿದೆ.

ಬೆಂಗಳೂರಿನಿಂದ ಕುಣಿಗಲ್, ಯಡೆಯೂರು ದಾಟಿ ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಬೆಳ್ಳೂರು ಕ್ರಾಸ್ ಬಳಿ ಆದಿ ಚುಂಚನಗಿರಿಗೆ ಸ್ವಾಗತ ಎಂಬ ಕಮಾನು ಸ್ವಾಗತಿಸುತ್ತದೆ. ಅಲ್ಲಿಂದ ನಾಲ್ಕಾರು ಕಿಲೋ ಮೀಟರ್ ಹೋಗುವಷ್ಟರಲ್ಲಿ ಸುಂದರವಾದ ಹೆಬ್ಬಾಗಿಲು ದೇಗುಲಕ್ಕೆ ಸ್ವಾಗತ ಕೋರುತ್ತದೆ. ಹೆಬ್ಬಾಗಿಲು ದಾಟಿ ಹೋಗುತ್ತಿದ್ದಂತೆ ಬಲಭಾಗದಲ್ಲಿ ತಿಳಿನೀರಕೊಳ, ಬೆಟ್ಟದ ಹಿನ್ನೆಲೆಯಲ್ಲಿ ಕಂಗೊಳಿಸುವ ಭವ್ಯವಾದ ದೇವಾಲಯ ಗೋಚರಿಸುತ್ತದೆ. ಮೆಟ್ಟಿಲೇರಿ ಮೇಲೆ ಹೋಗುತ್ತಿದ್ದಂತೆ ಎಡಭಾಗದಲ್ಲಿ ಕಲ್ಲಿನ ಪಾದುಕೆ ಇರುವ ಪುಟ್ಟ ಮೂಲ ದೇವಾಲಯವಿದೆ. ಮೂಲ ದೇಗುಲದ ಎದುರಿನ ವಿಶಾಲ ಪ್ರದೇಶದಲ್ಲಿ  ನಾಲ್ಕೂ ದಿಕ್ಕಿಗೆ ನಾಲ್ಕು 30 ಅಡಿ ಎತ್ತರದ ಭವ್ಯ ಬಾಗಿಲು, ವಿಶಾಲವಾದ ಪ್ರಾಕಾರ ಇರುವ ಬೃಹತ್ ದೇವಾಲಯದಲ್ಲಿ ಕಾಲಭೈರವೇಶ್ವರನ ಮೂಲ ಮೂರ್ತಿ ಹಾಗೂ ಗರ್ಭಗೃಹದ ಎದುರು ಮತ್ತು ಪ್ರಾಕಾರದ ಸುತ್ತಲೂ ಇರುವ ಪ್ರತಿಯೊಂದ ಕಂಬದಲ್ಲೂ ಕಾಲಭೈರವೇಶ್ವರನ ನಾನಾ ರೂಪಗಳನ್ನು ಬಿಂಬಿಸಲಾಗಿದೆ.

ಪ್ರದಕ್ಷಿಣ ಪಥದಲ್ಲಿ ಮೊದಲಿಗೆ ಬೆಳ್ಳಿಯ ರಥ ಕಾಣುತ್ತದೆ. ಎದುರು ಭಾಗದಲ್ಲಿ ವಿಘ್ನನಿವಾರಕ ಗಣಪತಿಯ ಎತ್ತರದ ಪ್ರತಿಮೆಯಿದೆ. ಹಾಗೇ ಮುಂದೆ ಸಾಗಿದರೆ  ಉತ್ಸವ ಸಂದರ್ಭದಲ್ಲಿ ಬಳಸುವ ವಿವಿಧ ವಾಹನಗಳು ಮನಸೆಳೆಯುತ್ತವೆ. ಅದರ ಎದುರು ಹತ್ತು ಹನ್ನೆರೆಡು ಮೆಟ್ಟಿಲು ಇಳಿದರೆ ಕೆಳಭಾಗದಲ್ಲಿರುವ ಗರ್ಭಗೃಹದಲ್ಲಿ ತ್ರಿಶೂಲ, ಡಮರು ಅಭಯ ಹಾಗೂ ವರದ ಮುದ್ರೆ ಇರುವ ಸ್ತಂಭದಮ್ಮನ ವಿಗ್ರಹವಿದೆ. ಈ ತಾಯಿ ಸಕಲ ಕಾಯಿಲೆಗಳನ್ನೂ ಪರಿಹರಿಸುತ್ತಾಳೆ, ಸಂತಾನಭಾಗ್ಯವಿಲ್ಲದವರಿಗೆ ಸಂತಾನ ಕರುಣಿಸುತ್ತಾಳೆ ಎಂದು ಅರ್ಚಕರು ಹೇಳುತ್ತಾರೆ.

ಪ್ರದಕ್ಷಿಣೆ ಹಾಕಿ ಗರ್ಭಗೃಹವಿರುವ ದೇವಾಲಯದ ಒಳ ಪ್ರಾಂಗಣ ಪ್ರವೇಶಿಸುತ್ತಿದ್ದಂತೆ ಎತ್ತರದ ಗಣಪತಿ, ದುರ್ಗೆ ಹಾಗೂ ಭೈರವೇಶ್ವರನ ವಿವಿಧ ಶಿಲಾ ಮೂರ್ತಿಗಳು ಆಕರ್ಷಿಸುತ್ತವೆ. ಎದುರು ಗರ್ಭಗೃಹದಲ್ಲಿ ಕಾಲಭೈರವನ ಮೂರ್ತಿ ಇದೆ ಅದರ ಎದುರು ಕಾಲಭೈರವನ  ವಾಹನ ಶ್ವಾನ ಮೂರ್ತಿ ಇದೆ. ಹಿಂಭಾಗದಲ್ಲಿ ಅಮ್ಮನವರ ದೇವಾಲಯಗಳಿವೆ. ದೇವರ ದರ್ಶನ ಪಡೆದು ಪೂರ್ವದ್ವಾರದಿಂದ ಹೊರಬಂದರೆ ಬೆಟ್ಟದ ಮೇಲಿರುವ ಚೋಳರ ಕಾಲದ ಪುರಾತನ ದೇವಾಲಯಕ್ಕೆ ಹೋಗಲು ಮೆಟ್ಟಿಲುಗಳಿವೆ.

ಮೆಟ್ಟಿಲುಗಳ ಪಕ್ಕದಲ್ಲಿ ಮೂರು ಪುಟ್ಟ ದೇವಾಲಯಗಳಿದ್ದು, ಅದರ ಹಿಂಭಾಗದಲ್ಲಿ 27 ಅಡಿ ಎತ್ತರದ ಏಕಶಿಲೆಯಲ್ಲಿ ಕೆತ್ತಲಾದ ನಾಗಲಿಂಗೇಶ್ವರನ ಮೂರ್ತಿಯಿದೆ. ಸಾಲುಗಂಬಗಳಿಂದ ಕೂಡಿದ ಈ ದೇವಾಲಯದ ನೋಟ ಅತಿ ರಮ್ಯ.  ಮಠದ ವತಿಯಿಂದ ನಿತ್ಯ ಅನ್ನದಾಸೋಹ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಗಣಿತ ಸೇವೆ ಸಲ್ಲಿಸುತ್ತಿರುವ ಶ್ರೀಮಠ ಅಕ್ಷರ ದಾಸೋಹದಲ್ಲೂ ಮುಂಚೂಣಿಯಲ್ಲಿದೆ. ಶ್ರೀಕಾಲಭೈರವ ಕ್ಷೇತ್ರದಲ್ಲಿ ಪ್ರತಿವರ್ಷ ಫಾಲ್ಗುಣ ಪೂರ್ಣಿಯಂದು ನಡೆಯುವ ಉತ್ಸವ ಜಗದ್ವಿಖ್ಯಾತ.