Nov 1, 2013

ಹಲ್ಮಿಡಿ ಶಾಸನ

  ಹಲ್ಮಿಡಿ ಶಾಸನಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಸಿಕ್ಕಿರುವ ಅತ್ಯಂತ ಹಳೆಯ ಶಾಸನ. ಇದರ ಕಾಲವು ಕ್ರಿ.ಶ. 450. ಇದು ಪ್ರಕಟವಾಗಿದ್ದು 1936 ರಲ್ಲಿ. ಪ್ರಸಿದ್ಧ ಇತಿಹಾಸಜ್ಞರಾದ ಎಂ.ಎಚ್. ಕೃಷ್ಣ ಅವರು ಈ ಶಾಸನದ ಪಠ್ಯ ಮತ್ತು ವಿವರವಾದ ವಿಶ್ಲೇಷಣೆಯನ್ನು ಪ್ರಕಟಿಸಿದರು.
ಈ ಶಾಸನವು ಹಾಸನ ಜಿಲ್ಲೆಯ ಬೇಲೂರಿನ ಸಮೀಪದಲ್ಲಿರುವ ಹಲ್ಮಿಡಿ ಎಂಬ ಹಳ್ಳಿಯಲ್ಲಿ ಸಿಕ್ಕಿತು. ಈಗ ಇದನ್ನು ಕರ್ನಾಟಕ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ನಿರ್ದೇಶಕರ ಕಚೇರಿಯ ಆವರಣದಲ್ಲಿ ಇಡಲಾಗಿದೆ.(ಮೈಸೂರು) ಹಲ್ಮಿಡಿಯಲ್ಲಿ ಇದರ ಫೈಬರ್ ಗ್ಲಾಸ್ ನಕಲೊಂದನ್ನು ಪ್ರತಿಷ್ಠಾಪಿಸಲಾಗಿದೆ.
ಶಾಸನಶಿಲೆಯು ನಾಲ್ಕು ಅಡಿ ಎತ್ತರ, ಒಂದು ಅಡಿ ಅಗಲ ಮತ್ತು ಮುಕ್ಕಾಲು ಅಂಗುಲ ದಪ್ಪ ಇದೆ. ಈ ಶಾಸನದಲ್ಲಿ ಹದಿನಾರು ಸಾಲುಗಳಿವೆ. ಮೊದಲ ಸಾಲನ್ನು ಶಿಲೆಯ ಮೇಲುಭಾಗದಲ್ಲಿ ಕುದುರೆ ಲಾಳದ ಆಕೃತಿಯಲ್ಲಿ ಕೆತ್ತಲಾಗಿದೆ. ನಂತರದ ಹದಿನಾಲ್ಕು ಸಾಲುಗಳು ಶಾಸನದ ಫಲಕದ ಮೇಲೆ ಬರೆಯಲ್ಪಟ್ಟಿವೆ. ಕೊನೆಯ ಸಾಲನ್ನು, ಶಾಸನದ ಬಲ ಬದಿಯಲ್ಲಿ ಕೆಳಗಿನಿಂದ ಮೇಲೆ ಕೆತ್ತಲಾಗಿದೆ. ಸುಮಾರು ಇಪ್ಪತ್ತು ಕಡೆ ಶಾಸನದ ಲಿಪಿಯನ್ನು ಸ್ಪಷ್ಟವಾಗಿ ಓದಲು ಕಷ್ಟವಾಗುತ್ತದೆ. ಆದರೂ ಅದನ್ನು ಚೆನ್ನಾಗಿ ಸಂರಕ್ಷಣೆ ಮಾಡಲಾಗಿದೆಯಂದೇ ಹೇಳಬಹುದು.
ಮೊದಲ ಹದಿನೈದು ಸಾಲುಗಳ ಲಿಪಿಯು ಪಶ್ಚಿಮ ಘಟ್ಟಗಳ ಗವಿಗಳಲ್ಲಿ ದೊರೆತಿರುವ ಗುಹಾಲಿಪಿಯನ್ನು ಅಂತೆಯೇ ಶಾತವಾಹನರ ಕಾಲದ ಶಾಸನಗಳ ಲಿಪಿಯನ್ನು ಹೋಲುತ್ತದೆ. ಕದಂಬರ ಕಾಕುಸ್ಥವರ್ಮನ ತಾಳಗುಂದದ ಶಾಸನದ ಲಿಪಿಗೂ ಇದಕ್ಕೂ ಆಂಶಿಕವಾದ ಹೋಲಿಕೆಯಿದೆ. ಶಾಸನದಲ್ಲಿ ಅದರ ಕಾಲವನ್ನು ತಿಳಿಸಿಲ್ಲ. ಆದರೂ ವಿದ್ವಾಂಸರು ಇದರ ಕಾಲವನ್ನು ಕ್ರಿ.ಶ. 450 ಎಂದು ತೀರ್ಮಾನಿಸಿದ್ದಾರೆ. ಈ ನಿರ್ಣಯವು ಶಾಸನದಲ್ಲಿ ಪ್ರಸ್ತಾಪಿತವಾಗಿರುವ ಚಾರಿತ್ರಿಕ ವ್ಯಕ್ತಿಗಳು, ಅದರ ಭಾಷಿಕ ನೆಲೆಗಳು ಮುಂತಾದ ಸಂಗತಿಗಳನ್ನು ಅವಲಂಬಿಸಿದೆ.
ಭಟಾರಿ ಎನ್ನುವವನ ಮಗನಾದ ವಿಜ ಅರಸನಿಗೆ ಹಲ್ಮಿಡಿ ಮತ್ತು ಮೂಳುವಳ್ಳಿ ಎಂಬ ಹಳ್ಳಿಗಳನ್ನು ದಾನವಾಗಿ ಕೊಟ್ಟ ಸಂಗತಿಯನ್ನು ಈ ಶಾಸನವು ದಾಖಲೆ ಮಾಡುತ್ತದೆ. ಈ ದಾನವನ್ನು ಬಾಣ ಮತ್ತು ಸೇಂದ್ರಿಕ ಎಂಬ ಪ್ರದೇಶಗಳ ವೀರರ ಸಮ್ಮುಖದಲ್ಲಿ ನೀಡಲಾಯಿತು. ಕದಂಬರಿಗೂ ಕೇಕಯರಿಗೂ ನಡೆದ ಯುದ್ಧದಲ್ಲಿ ವಿಜ ಅರಸನು ತೋರಿಸಿದ ಪರಾಕ್ರಮಕ್ಕೆ ಪ್ರತಿಫಲವಾಗಿ ಈ ದಾನವನ್ನು ಕೊಟ್ಟಿದ್ದರು.ಈ ಹಳ್ಳಿಗಳಲ್ಲಿರುವ ಗದ್ದೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಬ್ರಾಹ್ಮಣರಿಗೆ ಕೊಡಬೇಕೆಂಬ ಸೂಚನೆಯನ್ನು ಶಾಸನದ ಕೊನೆಯ ಭಾಗವು ದಾಖಲೆ ಮಾಡುತ್ತದೆ. ಆ ಬ್ರಾಹ್ಮಣರಿಗೆ ಭೂಕಂದಾಯವನ್ನು ಕೊಡುವುದರಿಂದಲೂ ವಿನಾಯತಿಯನ್ನು ನೀಡಲಾಗಿತ್ತು.
ಸಂಸ್ಕೃತದಲ್ಲಿರುವ ಮೊದಲ ಸಾಲು ವಿಷ್ಣುವಿನ ಪ್ರಾರ್ಥನೆಯಾಗಿದೆ. ಅದರ ಶೈಲಿಯು ಅಲಂಕಾರಭರಿತವೂ ಪಾಂಡಿತ್ಯಪೂರ್ಣವೂ ಆಗಿದೆ. ಶಾಸನದ ಮಿಕ್ಕ ಸಾಲುಗಳು ಕನ್ನಡದಲ್ಲಿವೆ. ಆದರೆ, ಅವು ಕೂಡ ಸಂಸ್ಕೃತದಿಂದ ತೆಗೆದುಕೊಂಡ ಸಮಾಸಪದಗಳಿಂದ ನಿಬಿಡವಾಗಿವೆ. ಇಡೀ ಶಾಸನದಲ್ಲಿ ಸುಮಾರು ಇಪ್ಪತ್ತೈದು ಕನ್ನಡ ಪದಗಳಿವೆ. ಇಲ್ಲಿನ ಭಾಷೆಯು ಕನ್ನಡದ ವಿಕಾಸದಲ್ಲಿ ಮೊಲ ಹಂತವೆಂದು ತಿಳಿಯಲಾದ ಪೂರ್ವದ ಹಳಗನ್ನಡದಲ್ಲಿದೆ. ಪ್ರಥಮಾ ವಿಭಕ್ತಿ ಪ್ರತ್ಯದ ದೀರ್ಘೀಕರಣ ಮತ್ತು ಸಪ್ತಮೀ ವಿಭಕ್ತಿ ಪ್ರತ್ಯವಾಗಿ ‘ಉಳ್’ ಎಂಬ ರೂಪದ ಬಳಕೆಗಳು ಈ ಶಾಸನದ ಅನನ್ಯ ವ್ಯಾಕರಣರೂಪಗಳಲ್ಲಿ ಕೆಲವು. ಇಲ್ಲಿ ಬಳಸಲಾಗಿರುವ ಕರ್ಮಣೀ ಪ್ರಯೋಗವು ಕ್ರಿ.ಶ. 450 ರಷ್ಟು ಹಿಂದೆಯೇ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವವು ಆಗಿತ್ತೆನ್ನುವುದಕ್ಕೆ ಪುರಾವೆಯಾಗಿದೆ.
ಈ ಶಾಸನದಲ್ಲಿರುವ ಕೆಲವು ಪದಗಳ ಖಚಿತವಾದ ಅರ್ಥದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆಗಿನ ಕಾಲದಲ್ಲಿ ಜಯಶಾಲಿಗಳೂ ಪರಾಕ್ರಮಿಗಳೂ ಆದ ಯೋಧರಿಗೆ ಸೂಕ್ತವಾದ ದತ್ತಿಗಳನ್ನು ನೀಡುವ ಪದ್ಧತಿಯು ಇತ್ತೆಂದು ಇದರಿಂದ ತಿಳಿದು ಬರುತ್ತದೆ. ಇಂತಹ ಕೊಡುಗೆಯನ್ನು ಹೋರಾಡಿ ಮೃತರಾದ ವೀರರ ಕುಟುಂಬವರ್ಗದವರಿಗೆ ಕೊಡುವ ಪದ್ಧತಿಯೂ ಇತ್ತು.
ಹೀಗೆ ಹಲ್ಮಿಡಿ ಶಾಸನವು ಕನ್ನಡದ ಸಂದರ್ಭದಲ್ಲಿ ಬಹಳ ಮಹತ್ವದ ದಾಖಲೆಯಾಗಿದೆ.
ಮರೆತ ಮಾತು: ಈಚೆಗೆ ಡಾ. ಷ. ಶೆಟ್ಟರ್ ಅವರು ಗಂಗ ರಾಜವಂಶಕ್ಕೆ ಸೇರಿದ ಕೊಂಗುಣಿವರ್ಮನ ಒಂದು ಶಾಸನವು, ಹಲ್ಮಿಡಿ ಶಾಸನಕ್ಕಿಂತ ಹಿಂದಿನದೆಂದು ಅಭಿಪ್ರಾಯ ಪಟ್ಟಿದ್ದಾರೆ.
ಹಲ್ಮಿಡಿ ಶಾಸನದ ಪಠ್ಯ
ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ