Apr 10, 2009

ಬಸವಣ್ಣನ ವಚನಗಳ ಭಾವಾರ್ಥ

ಬಸವಣ್ಣನ ವಚನಗಳ ಭಾವಾರ್ಥ

ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ
ಜಲವೊಂದೇ ಶೌಚಾ ಚಮನಕ್ಕೆ !
ಕುಲವೊಂದೇ ತನ್ನ ತಾನರಿದವಂಗೆ !
ಫಲವೊಂದೇ ಫಡದರ್ಶನ ಮುಕ್ತಿಗೆ
ನಬಿಲವೊಂದೇ ಕೂಡಲ ಸಂಗಮದೇವ ನಿಮ್ಮನರಿದವಂಗೆ

- ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.
-------------------

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿದ ಮೇಯಿತ್ತು!
ಕೊಂದಹರೆಂಬುದನರಿಯದೆ
ಬೆಂದೊಡಲ ಹೊರೆವುತ್ತಲಿದೆ?
ಅದಂದೆ ಹುಟ್ಟಿತ್ತು ಅದಂದೇ ಹೊಂದಿತ್ತು!!
ಕೊಂದವರುಳಿವರೆ ಕೂಡಲ ಸಂಗಮದೇವ

-ಬಲಿಕೊಡಲೆಂದು ತಂದ ಕುರಿಯು ತನಗೆ ಮುಂದೆ ಸಾವಿದೆ ಎಂದರಿಯದೆ ಬಾಗಿಲಿಗೆ ಕಟ್ಟಿದ ತೋರಣದ ಹಸಿರೆಲೆಗಳನ್ನು ತಿನ್ನುತ್ತಿರುವುದು. ತನ್ನೆದುರಲ್ಲಿ ತನ್ನ ಕೊರಳನ್ನು ಕತ್ತರಿಸಲು ಕತ್ತಿಮಸೆಯುತ್ತಿರುವರು ಎಂಬ ಅರಿವು ಅದಕ್ಕಿಲ್ಲ. ಈ ಮಾನವನಾದರೂ ಬಲಿ ಕುರಿಯಂತೆ, ಸಾವು ಈಗಲೋ ಆಗಲೋ ಬರಲು ಸಿದ್ಧವಾಗಿದ್ದರೂ, ಸುಖಕ್ಕೆ ಬಲಿಗಳಂತಹ ಹೀನ ಕಾರ್ಯಗಳನ್ನೆಸಗುತ್ತಿರುವನು.
-------------------

ದಯವಿಲ್ಲದ ಧರ್ಮವದೇವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!

-ಎಲ್ಲಾ ಧರ್ಮಗಳು ಪ್ರತಿಪಾದಿಸುವದು ದಯೆ, ದಯವೇ ಧರ್ಮದ ಮೂಲಾಂಶ, ಸಮಷ್ಟಿ ಹಿತವನ್ನು ಸಾಧಿಸಬೇಕಾದರೆ ದಯವಿರಬೇಕು ಸಕಲ ಪ್ರಾಣಿಗಳಲ್ಲಿ. ದಯವೇ ಇಲ್ಲವಲ್ಲ ಅಲ್ಲಿ ದ್ವೇಷ ರಾಗಗಳ ವಿಜೃಂಭಿಸಿ ಸರ್ವನಾಶಕ್ಕೆ ಕಾರಣವಾಗುತ್ತದೆ. ಆಯಾ ಧರ್ಮ ಸ್ಥಾಪಕರು, ಪ್ರವರ್ತಕರು ದಯೆಗೆ ಪ್ರಥಮಸ್ಥಾನ ಕೊಟ್ಟಿದ್ದಲ್ಲದೆ ದಯವೇ ಧರ್ಮದ ಮೂಲಾಂಶವಾಗಿಸಿದ್ದಾರೆ.
-------------------

ಕೊಲುವನೇ ಮಾದಿಗ!
ಹೊಲಸ ತಿಂಬುವನೇ ಹೊಲೆಯ
ಕುಲವೇನೋ ಆವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು!

-ಮಾದಿಗ-ಹೊಲೆಯ ಎಂದು ಊರ ಹೊರಗಿರುವವರನ್ನು ಕರೆಯುವರು. ಆದರೆ ಮಾದಿಗ ಹೊಲೆಯ ಊರೊಳಗಿಲ್ಲವೇ? ಯಜ್ಞಯಾಗಾದಿಗಳ ನೆಪದಲ್ಲಿ ಪಶುಗಳನ್ನು ಆಹುತಿ ಕೊಟ್ಟು ಕೊಂದು ತಿನ್ನುವರು ಹೊಲೆಯರಲ್ಲವೇ? ಮಾದಿಗರಲ್ಲವೇ? ಯಾವನು ಹುಟ್ಟಿದ ಕುಲ ಏನಾದರೂ ಆರಿಗಲಿ, ಯಾರು ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಹಾರೈಸುವನೋ ಅವನೇ ಕುಲಜನು.
-------------------

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

-ಕಳ್ಳತನ ಮಾಡಬೇಡ,ಕೊಲ್ಲಬೇಡ,ಸಿಟ್ಟುಮಾಡಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ - ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು, ಇದೇ ಮಾರ್ಗ ದೇವರನೊಲಿಸುಕೊಳ್ಳುವದು. ಆತ್ಮೋದ್ಧಾರಕ್ಕೆ ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂಬಂತೆ ಬಸವಣ್ಣ ತಿಳಿಸಿದ್ದಾರೆ.